ಪ್ರಕೃತಿಯನ್ನು ಗಮನಿಸಿದಾಗ ಬೇಸಿಗೆ ಕಾಲದ ಬದಲಾವಣೆಯನ್ನು ಅರ್ಥೈಸಬಹುದು.
ಗಿಡಮರಗಳು ಇನ್ನೇನೋ ಸಾಯುವ ಸ್ಥಿತಿಯಲ್ಲಿದ್ದಂತೆ. ಗದ್ದೆ, ತೋಟ ಭೂಮಿ ಒಣಗಿ ಶುಷ್ಕ ವಾತಾವರಣ.
ಒಂದು ನೋಟಕ್ಕೆ ಜೀವಕಳೆದು ಕೊಂಡಂತೆ ತೋಚುತ್ತಿದ್ದರೂ, ನಿಜ ಸ್ಥಿತಿ ಅದಲ್ಲ. ಹಾಗೆಯೇ ಮನುಷ್ಯ ಕೂಡಾ.
ಮನುಷ್ಯ ಮನಸ್ಸುಗಳಿಗೂ ಕೆಲವೊಮ್ಮೆ ವಸಂತ, ಹೇಮಂತ. ಬೇಸಿಗೆಯ ಉಷ್ಣತೆಯಂತೆ ನಮ್ಮ ವಿಶ್ವಾಸ (ಈಮಾನ್) ದುರ್ಬಲವಾದಂತೆ ತೋಚುತ್ತಿರುವಾಗ ಇನ್ನೇನೋ ಸಾಯುವಂತಹ ಪರಿಸ್ಥಿತಿಯಲ್ಲಿರುವಾಗ ವಿಶ್ವಾಸವನ್ನು ಪುನಶ್ಚೇತನಗೊಳಿಸಲು ಬೇಸಿಗೆಯ ಶುಷ್ಕ ವಾತಾವರಣವನ್ನು ಬದಲಾಯಿಸಲು ಧರೆಗೆ ತಂಪನ್ನೀಯುವ ವರ್ಷಧಾರೆಯಂತೆ ಬರಡಾದ ಹೃದಯಗಳಿಗೆ ದೇವವಾಣಿಯ ತಿಳಿ ನೀರ ಸಿಂಚನಗೈಯ್ದು ರಮಝಾನ್ ಆಗಮನವಾಗುತ್ತಿದೆ.
ದುರ್ಬಲವಾಗುತ್ತಿರುವ ಈಮಾನನ್ನು ಪುನಶ್ಚೇತನಗೊಳಿಸಲು ಕರುಣಾಮಯಿಯ ಕರುಣೆಯ ತಿಂಗಳು. ಕಳೆದ ಎಲ್ಲಾ ರಮದಾನಿಗಿಂತ ವಿಭಿನ್ನವಾಗಿ ಬದಲಾವಣೆಯ ತಿಂಗಳಾಗಿ ನಮ್ಮನ್ನೆಲ್ಲರನ್ನೂ ಹರಸಲಿ.
ವರ್ಷದ ಹೊಸ ಮಳೆಯು ಧರೆಯನ್ನು ಬದಲಾಯಿಸುವಂತೆ ನಮ್ಮಲ್ಲೂ ಬದಲಾವಣೆ ತರಲೆಂದು ಆಶಿಸುತ್ತಾ ಸರ್ವರಿಗೂ ರಮದಾನ್ ಶುಭಾಶಯಗಳು.
✍️ ರೈಹಾನ್ ವಿ.ಕೆ.
ಸಚೇರಿಪೇಟೆ