Home / ಪ್ರಶ್ನೋತ್ತರ / ಮಹಿಳೆಯೇಕೆ ಪ್ರವಾದಿಯಾಗಿಲ್ಲ?

ಮಹಿಳೆಯೇಕೆ ಪ್ರವಾದಿಯಾಗಿಲ್ಲ?

ಪ್ರಶ್ನೆ : ದೇವರ ಬಳಿ ಲಿಂಗ ತಾರತಮ್ಯವಿಲ್ಲ ಎಂದು ಹೇಳಲಾಗುತ್ತದೆ. ಆದರೆ ಪ್ರವಾದಿಗಳಾಗಿ ಮಹಿಳೆಯರನ್ನು ಯಾಕೆ ಆರಿಸಲಿಲ್ಲ?

ಉತ್ತರ :ದೇವನು ಕಲಿಸಿರುವ ಜೀವನ ವ್ಯವಸ್ಥೆಯನ್ನು ಜನರಿಗೆ ಕಲಿಸುವುದು, ಆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸುವುದು ಪ್ರವಾದಿಗಳ ಪ್ರಧಾನ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ವಿಷಯಗಳಲ್ಲೂ ಆರ್ಥಿಕ, ಸಾಂಸ್ಕ್ರತಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದದ ವಿಷಯಗಳಲ್ಲೂ ಅವರು ಮಾನವ ಕೋಟಿಗೆ ಮಾದರಿಯಾಗಿದ್ದಾರೆ. ತಿಂಗಳಿನ ಕೆಲವು ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸುವುದರಿಂದಲೂ, ಗರ್ಭಧಾರಣೆ, ಹೆರಿಗೆ ಮುಂತಾದ ವಿಷಯಗಳಿಂದಾಗಿ ಆಡಳಿತದಿಂದ ಅಥವಾ ನಾಯಕತ್ವದಿಂದ ಹಿಂದೆ ಸರಿಯಬೇಕಾದಂತಹ ಅನಿವಾರ್ಯತೆ ಮಹಿಳೆಯರಿಗೆ ಸಂಬಂಧಿಸಿದಂತೆ ಇದೆ. ಆದ್ದರಿಂದ ಜನರಿಗೆ ಸದಾ ಮಾರ್ಗದರ್ಶನ ನೀಡಬೇಕಾದಂತಹ ಹೊಣೆಗಾರಿಕೆಯಿಂದ ಅವಳನ್ನು ಮುಕ್ತಗೊಳಿಸಲಾಗಿದೆ. ಆದರೂ ಪ್ರವಾದಿ ಮೂಸಾರ(ಅ) ತಾಯಿಗೆ, ತನ್ನ ಜೀವನದಲ್ಲಿ ಅಳವಡಿಸಬೇಕಾದ ಸದಾಚಾರಗಳ ಕುರಿತು ದೇವರಿಂದ ನೇರವಾಗಿ ಸೂಚನೆ ನೀಡಲಾಗಿದೆ ಎಂದು ಕುರ್‍ಆನ್ ತಿಳಿಸಿದೆ. ಅಲ್ಲಾಹನು ಹೇಳುತ್ತಾನೆ, “ನಾವು ಮೂಸಾರ ತಾಯಿಗೆ, ‘ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗೆಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿಬಿಡು. ನೀನು ಕೊಂಚವೂ ಭಯ ಪಡಬೇಡ. ನಾವು ಇದನ್ನು ನಿನ್ನ ಬಳಿಗೆ ಮರಳಿ ತರುವೆವು ಮತ್ತು ಇದನ್ನು ಸಂದೇಶ ವಾಹಕರಲ್ಲಿ ಸೇರಿಸುವೆವು’ ಎಂದು ಸೂಚನೆ ನೀಡಿದೆವು.” (28.7)

ಪ್ರವಾದಿಗಳಿಗೆ ಲಭಿಸಿದಂತೆ ಈಸಾ(ಏಸು)ರ ಮಾತೆ ಮರ್ಯಮ್‍ರಿಗೆ ದೇವದೂತನಿಂದ ದಿವ್ಯ ಸಂದೇಶ ಲಭಿಸಿದೆ ಎಂದು ಕುರ್‍ಆನ್ ಹೇಳಿದೆ:
“ಮರ್ಯಮರಿಗೆ ಆ ಮಗುವಿನ ಗರ್ಭ ಉಂಟಾಯಿತು ಮತ್ತು ಅವರು ಆ ಗರ್ಭ ಸಹಿತ ದೂರದ ಒಂದು ಸ್ಥಳಕ್ಕೆ ಹೋದರು. ತರುವಾಯ ಪ್ರಸವ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು, ‘ಅಕಟ ನಾನು ಇದಕ್ಕಿಂತ ಮುಂಚೆ ಸತ್ತು ಹೋಗಿದ್ದರೆ! ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ (ಚೆನ್ನಾಗಿತು)’ ಎನ್ನ ತೊಡಗಿದರು. ದೇವಚರನು ಕಾಲ ಬಳಿಯಿಂದ ಅವರನ್ನು ಕೂಗಿ, ‘ಮರುಗಬೇಡಿರಿ, ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿ ಬಿಟ್ಟಿದ್ದಾನೆ ಮತ್ತು ನೀವು ಆ ಮರದ ಕಾಂಡವನ್ನು ಹಿಡಿದು ಅಲುಗಾಡಿಸಿರಿ. ನಿಮ್ಮ ಮೇಲೆ ಹಸನಾದ ಖರ್ಜೂರದ ಹಣ್ಣುಗಳು ಉದುರಿ ಬೀಳುವುವು. ಈ ರೀತಿಯಲ್ಲಿ ನೀವು ತಿಂದು, ಕುಡಿದು ಕಣ್ಮನಗಳನ್ನು ತಣಿಸಿರಿ. ನೀವು ಮಾನವರಾರನ್ನಾದರೂ ಕಂಡರೆ ನಾನು ಕರುಣಾನಿಧಿ(ಅಲ್ಲಾಹನಿ)ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರೆನೆಂದು ಹೇಳಿಬೀಡಿರಿ’ ಎಂದನು.” (19: 22-26)

ಪ್ರಾಕೃತಿಕವಾದ ಕಾರಣಗಳಿಂದ ಮಹಿಳೆಯರನ್ನು ಪ್ರವಾದಿಗಳಾಗಿ ಆರಿಸದಿದ್ದರೂ ಪ್ರವಾದಿಗಳಿಗೆ ದಿವ್ಯ ಸಂದೇಶಗಳು ಲಭಿಸಿದಂತೆ ಅವರಿಗೂ ಲಭಿಸಿದೆ ಎಂದು ಈ ಮೇಲಿನ ಕುರ್‍ಆನ್ ವಚನಗಳಿಂದ ವ್ಯಕ್ತವಾಗುತ್ತದೆ.
SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *