ಇಮ್ರುಲ್ ಕೈಸ್ ಎಂಬ ಕವಿ ಪುರಾತನ ಕಾಲದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದ ಕವಿಗಳಲ್ಲಿ ಒಬ್ಬರಾಗಿದ್ದರು.
ಅವರ ಕವನವನ್ನು ಕಾಬಾಲಯದಲ್ಲಿ ನೇತು ಹಾಕಲಾಗುತ್ತಿತ್ತು.
ಹಾಗೆ ಕಾಬಾಲಯದ ಕಿಲ್ಲ (ಬಟ್ಟೆ)ಯಲ್ಲಿ ತೂಗು ಹಾಕುವ ಕವಿತೆಗಳನ್ನು ಸಬ್ ಉಲ್ ಮುಅಲ್ಲಕಾತ್ ಎನ್ನಲಾಗುತ್ತಿತ್ತು.
ಈ ಪ್ರಸಿದ್ದವಾದ ಏಳು ಕವಿತೆಗಳನ್ನು ರಚಿಸಿದವರಲ್ಲಿ ಒಬ್ಬರಾಗಿದ್ದರು ಇಮ್ರುಲ್ ಕೈಸ್.
ಪ್ರವಾದಿಯ ಆಗಮನಕ್ಕೆ ಮುಂಚಿನ ಕಾಲವಾಗಿತ್ತು ಅದು.
ಅರೇಬಿಯಾದ ರಾಜನಾದ ಹಜರುಬ್ನು ಹಾರಿಸ್ ಆಲ್ ಕಿಂದ ನ
ಮಗ ಇಮ್ರುಲ್ ಕೈಸ್.
ಒಮ್ಮೆ ಒಂದು ಯುದ್ದದಲ್ಲಿ ರಾಜನಾದ ಇಮ್ರುಲ್ ಕೈಸ್ ನ ತಂದೆ ಆಳವಾದ ಗಾಯಕ್ಕೆ ತುತ್ತಾಗುತ್ತಾರೆ.
ಏಳು ಗಂಡು ಮಕ್ಕಳ ಪೈಕಿ ಕೊನೆಯವನಾಗಿದ್ದ ಇಮ್ರುಲ್ ಕೈಸ್ ನ ಹವ್ಯಾಸ ಏನೆಂದರೆ ಸೌಂದರ್ಯವುಳ್ಳ ಸ್ತ್ರೀಯರನ್ನು ಕಂಡರೆ ಅವರೊಂದಿಗೆ ತನ್ನ ಅನುರಾಗವನ್ನು ಹಂಚುವುದು.
ಅವರಿಂದ ಪ್ರತಿಕ್ರಿಯೆ ಏನೂ ಬಾರದಿದ್ದಾಗ ಮದ್ಯಪಾನ ಮಾಡುವುದು. ಕವನ ಬರೆಯುವುದು ಇತ್ಯಾದಿ.
ಇತ್ತ ತನ್ನ ತಂದೆ ಗಾಯಾಳುವಾಗಿ ಮರಣ ಶೈಯ್ಯೆಯಲ್ಲಿರುವಾಗ ಇಪ್ಪತ್ತೈದನೇ ಪ್ರಾಯಕ್ಕೆ ತಲುಪಿದ ಇಮ್ರುಲ್ ಕೈಸ್ ಇದಾವ ಪರಿವೇ ಇಲ್ಲದೆ ತನ್ನ ಚಟದಲ್ಲಿ ಮಗ್ನನಾಗಿದ್ದ.
ಹೀಗಿರುವಾಗ ಪಿತ ರಾಜ ನನ್ನ ಕಾಲಾನಂತರ ಪಟ್ಟಾಭಿಷೇಕಕ್ಕೆ ಯಾರು ಅರ್ಹರೆಂದು ಪರೀಕ್ಷಿಸಲು ತನ್ನ ಮಂತ್ರಿಯನ್ನು ಕರೆದು ಈ ರೀತಿ ಹೇಳುತ್ತಾರೆ:
ನನ್ನ ಏಳು ಮಂದಿ ಗಂಡು ಮಕ್ಕಳ ಬಳಿ ಹೋಗಿ ನಿಮ್ಮ ತಂದೆ ಮರಣ ಹೊಂದಿರುವುದಾಗಿ ತಿಳಿಸಬೇಕು. ಯಾರು ನನ್ನ ನಿಧನ ವಾರ್ತೆ ಕೇಳಿ ಸಂಯಮದಿಂದ ವರ್ತಿಸುತ್ತಾರೋ ಅವನೊಂದಿಗೆ ಈ ಪತ್ರವನ್ನು ಹಂಚಬೇಕೆಂದು ಒಂದು ಪತ್ರವನ್ನು ಕೊಡುತ್ತಾರೆ.
ಆ ಪತ್ರದಲ್ಲಿ ಈ ರೀತಿ ಬರೆಯಲಾಗಿತ್ತು.
ನನ್ನ ನಿಧನ ವಾರ್ತೆಯಿಂದ ಅಟ್ಟಹಾಸ ಹಾಕಿ ಸಹನೆಯನ್ನು ಕಳೆದುಕೊಳ್ಳದ ನೀನೇ ಮುಂದಿನ ರಾಜ.
ಹಾಗೆ ಮಂತ್ರಿಯು ರಾಜನ ಆದೇಶದಂತೆ ಎಲ್ಲಾ ಮಕ್ಕಳ ಬಳಿ ಹೋಗಿ ಕೊನೆಯದಾಗಿ ಅಂತಿಮ ಪುತ್ರ ಇಮ್ರುಲ್ ಕೈಸ್ ನ ಬಳಿ ಬರುತ್ತಾರೆ. ತಂದೆಯ ನಿಧನಾ ವಾರ್ತೆಯಿಂದ ಯಾವುದೇ ತರಹದ ಅಟ್ಟಹಾಸಗೈಯದ ಹಾಗೂ ದುಃಖಿತನಾಗದ ಈ ಇಮ್ರುಲ್ ಕೈಸ್ ನ ಬಳಿ ಈ ಪತ್ರವನ್ನು ಕೊಡಲಾಗುತ್ತದೆ.
ಆದರೆ ತನ್ನ ಚಟದಲ್ಲಿ ನಿರತನಾದ ಇಮ್ರುಲ್ ಕೈಸ್ ಬಹಳ ಪ್ರಾಮುಖ್ಯೃತೆಯಿರುವ ಈ ಪತ್ರವನ್ನು ತೆರೆದು ಓದಲು ಮುಂದಾಗದೇ ತನ್ನ ಮಧ್ಯಪಾನದ ಸಮಯವಿದು; ಆದ್ದರಿಂದ ಪತ್ರದ ವಿಷಯವಾಗಿ ಆಮೇಲೆ ಚರ್ಚಿಸೋಣವೆಂದು ಗಂಟಲು ಪೂರ್ತಿ ಮದ್ಯಪಿಸಿ ಅಮಲಿನಲ್ಲಿರುತ್ತಾನೆ.
ಅವನ ನಶೆಯು ಕ್ರಮೇಣ ಇಳಿಯುತ್ತಾ ಬಂದಾಗ ಪತ್ರದ ಬಗ್ಗೆ ನೆನಪು ಬಂದು ಪತ್ರದಲ್ಲಿ ತಿಳಿಸಿದ ಪಟ್ಟಾಭಿಷೇಕಕ್ಕಾಗಿ ಆಸ್ಥಾನಕ್ಕೆ ಬಂದಾಗ ಅದಾಗಲೇ ರಾಜನಾದ ತಂದೆಯ ಅಂತ್ಯಕ್ರಿಯೆ ಮುಗಿದಿತ್ತು . ಮಾತ್ರವಲ್ಲ ಆಸ್ಥಾನವನ್ನು ನೆರೆಯ ಓರ್ವ ರಾಜ ಅಕ್ರಮವಾಗಿ ವಶಪಡಿಸಿಯೂ ಆಗಿತ್ತು.
ಇದು ಜಾಹಿಲೀಯ (ಅಜ್ಞಾನ) ಕಾಲವೆಂದು ಕುರ್ ಆನ್ ಕರೆದ ಕಾಲದ ಒಂದು ನೈಜ ಘಟನೆ.
ಪ್ರಾಧಾನ್ಯತೆ ಇರುವ ವಿಷಯಗಳಿಗೆ ಮಹತ್ವವನ್ನು ನೀಡದೆ , ತೀರಾ ಕ್ಷುಲ್ಲಕ ವಿಷಯಗಳಿಗೆ ಪ್ರಾಧಾನ್ಯತೆ ನೀಡುವುದಾಗಿದೆ ಜಹಾಲತ್
ಇದನ್ನುಆಧುನಿಕ ಕಾಲದಲ್ಲಿ ವೈಯಕ್ತಿಕವಾಗಿಯೂ ಸಾಮುದಾಯಿಕವಾಗಿಯೂ ರಾಷ್ಟ್ರೀಯ ಮಟ್ಟದಲ್ಲೂ ನಮಗೆ ಕಾಣಬಹುದು. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ, ಕುಟುಂಬ ಕಲಹ, ದಾಂಪತ್ಯ ,ಒಡಕು, ಕೊಲೆ, ವಾದ ವಿವಾದ…. ಹೀಗೆ ಪ್ರತಿಯೊಂದರಲ್ಲೂ ಅಜ್ಞಾನತೆ(ಜಹಾಲತ್) ಕಾಣಬಹುದು.ಅ ಥವ ಜವಾಬ್ದಾರಿಕೆಗಳಿಂದ ದೂರ ಉಳಿಯುವ ಒಂದು ಸಮಾಜವನ್ನು ನಾವು ಕಾಣುತ್ತಿದ್ದೇವೆ.
ಅನೇಕ ಯುವ ಪೀಳಿಗೆಯು ಆಧುನಿಕ ಕಾಲದ ಇಮ್ರುಲ್ ಕೈಸ್ ಗಳಾಗಿ ಇಂದು ಸಮಾಜದಲ್ಲಿದ್ದಾರೆಯೇ ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ.
ಪ್ರಸಕ್ತ ಕಾಲದ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸಿದಾಗ
ಅಲ್ ಅಸ್ರುಲ್ ಜಾಹಿಲೀಯ ಎಂದು ಕುರಾನ್ ನಲ್ಲಿ ನಾಲ್ಕು ಕಡೆಗಳಲ್ಲಿ ಪರಾಮರ್ಶಿಸಲಾದಂತಹ ಆ ಜಾಹಿಲೀಯ ಕಾಲ ಮರುಕಳಿಸಿದೆಯೆಂಬ ವಾಸ್ತವ ಅರಿವಾಗುತ್ತದೆ.
ಜಹಾಲತ್ ವ್ಯಕ್ತಿಗಳಿಂದ ಆರಂಭಿಸಿ ಸಮಾಜಕ್ಕೆ ಹಬ್ಬುವಂತ ಒಂದು ಸಾಂಕ್ರಾಮಿಕ ರೋಗವೆಂದರೂ ತಪ್ಪಿಲ್ಲ.
ಆದ್ದರಿಂದ ನಾವು ಪ್ರತಿಯೊಬ್ಬರೂ ತನ್ನೊಳಗಿನ ಜಹಾಲತ್ ನ ಬಗ್ಗೆ ಆಲೋಚಿಸಿ ಅದರಿಂದ ಮುಕ್ತರಾಗಬೇಕಾಗಿದೆ.
✍️ ರೈಹಾನ್.ವಿ.ಕೆ.
ಸಚೇರಿಪೇಟೆ.