ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷರು,
ಭಾರತ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು
ಪ್ರವಾದಿ ಮುಹಮ್ಮದ್ರು(ಸ) ಅಲ್ಲಾಹನಿಂದ ಅವತೀರ್ಣವಾದ `ಸತ್ಯದ ಸಂದೇಶವನ್ನು ಸಾರುತ್ತಿರುವ ಸಂದರ್ಭದಲ್ಲಿ ಅವರಿಗೆ ಸತ್ಯನಿಷೇಧಿಗಳಿಂದ ತುಂಬಾ ವಿರೋಧಗಳು ಎದುರಾದುವು. ಅವರ(ಸ) ಪ್ರಾಣಕ್ಕೂ ಅಪಾಯ ಒದಗಿತ್ತು. ಸಾಕಷ್ಟು ಬಗೆಯ ಹಿಂಸೆಗಳನ್ನು ಆ ಸತ್ಯನಿಷೇಧಿಗಳು ಪ್ರವಾದಿಯವರಿಗೆ(ಸ) ಕೊಟ್ಟರು. ಧನ, ಕನಕ, ಸಾಮ್ರಾಜ್ಯ, ಹೆಣ್ಣು- ಇವೆಲ್ಲವುಗಳ ಆಮಿಷವನ್ನೊಡ್ಡಿದ್ದರು. ಆದರೆ ಸತ್ಯಪಥವನ್ನು ಕ್ರಮಿಸುವಲ್ಲಿ, ಸತ್ಯವನ್ನು ಸಾರಿ ಹೇಳುವಲ್ಲಿ ಪ್ರವಾದಿಯವರು(ಸ) ಇಂತಹ ಯಾವುದೇ ಆಶೆ, ಆಮಿಷಗಳಿಗೆ ಬಲಿಯಾಗಲಿಲ್ಲ. ಅಪಾಯಗಳಿಗೆ ಹೆದರಲಿಲ್ಲ. ಈ ಎಲ್ಲಾ ದಳ್ಳುರಿಯ ಹಾದಿಯಲ್ಲೂ ಅವರು ಹೂವಿನ ಹಾಸಿಗೆಯಲ್ಲಿ ನಡೆದಂತೆ ನಡೆದರು. ಯಾರನ್ನೂ ದ್ವೇಷಿಸಲಿಲ್ಲ. ‘ಬೈದವರನ್ನ ಬಂಧುಗಳು ಹೊಡೆದವರೆನ್ನ ಹೊರೆದವರು’ ಎನ್ನುವ ಬಗೆಯಲ್ಲಿ ಚಿಂತಿಸಿ ವೈರಿಗಳನ್ನೂ ಪ್ರೀತಿಸುತ್ತಾ ಬದುಕು ಸಾಗಿಸಿದರು. ಈ ಬಗೆಯ ನಡೆನುಡಿಗಳ ಮೂಲಕವೇ ಅರೇಬಿಯಾದ ಮರಳುಗಾಡಿನಲ್ಲಿ ಪ್ರವಾದಿಯವರು(ಸ) ಪ್ರೀತಿ-ವಿಶ್ವಾಸಗಳ ಸಾಮ್ರಾಜ್ಯ ರೂಪಿಸಿ ನಂದನವನ್ನು ನಿರ್ಮಾಣ ಮಾಡಿದರು.
ಪ್ರೀತಿ ತುಂಬಿ ತುಳುಕುವ ಹೃದಯವಂತಿಕೆಯ ಈ ಮಹಾಮಾನವರ ಅಂತರಂಗದ ತುಡಿತ ಮಿಡಿತಗಳಲ್ಲಿರುವ ಸಮಾನತೆ, ಜನರ ಒಳಿತಿಗಾಗಿ ಅವರು ಪಡುವ ಪಾಡು, ತನ್ನ ಸ್ವಂತ ಸುಖದ ಬಗ್ಗೆ ಯೋಚಿಸದೆ ಲೋಕ ಹಿತಾರ್ಥವಾಗಿ ಅವರು ಚಿಂತಿಸಿದ ಬಗೆ, ನಡೆದ ಗುಡ್ಡ-ಬೆಟ್ಟಗಳ ಕಲ್ಲು-ಮುಳ್ಳಿನ ಹಾದಿ, ಪಟ್ಟ ಸಂಕಟಗಳ ಸಾಲುಸಾಲು ಓದಿದಾಗ ನಮ್ಮ ಕಣ್ಣಿನಲ್ಲಿ ನೀರು ಇಳಿದೀತು. ಹೃದಯ ನೋವಿನಿಂದ, ಕಾವಿನಿಂದ ಬೆಂದೀತು. ಆಗಲೆಲ್ಲ ನಮ್ಮ ಹೃದಯ ವಿಶ್ವಭ್ರಾತೃತ್ವದ ಕುರಿತು ಚಡಪಡಿಸೀತು.