ಗಲ್ಫ್ ದೇಶಗಳಲ್ಲಿ ಹಿಂದೂ ಪ್ರಜೆಗಳು ಇಲ್ಲ. ಅಲ್ಲಿ ವಾಸ್ತವ್ಯವಿರುವ ಹಿಂದುಗಳು ಉದ್ಯೋಗಕ್ಕಾಗಿ ಹೋದ ವಿದೇಶಿಯರು. ಮುಸ್ಲಿಮರೂ ಸೇರಿದಂತೆ ವಿದೇಶಿಗಳಿಗೆ ಅಲ್ಲಿ ಸ್ಥಳ ಖರೀದಿಸುವ, ಆರಾಧನಾಲಯಗಳನ್ನು ನಿರ್ಮಿಸುವ ಅನುಮತಿ ಇಲ್ಲ ವಿದೇಶಿ ಮುಸ್ಲಿಮರಿಗೂ ಮಸೀದಿಯನ್ನು ನಿರ್ಮಿಸುವ ಅನುಮತಿ ಇಲ್ಲ. ವಿದೇಶಿಗಳಿಗೆ ಭಾರತದಲ್ಲೂ ಇತರ ಜಾತ್ಯತೀತ ರಾಷ್ಟ್ರಗಳಲ್ಲೂ ಸ್ವಂತ ಆರಾಧನಾಲಯ ಕಟ್ಟುವ ಅನುಮತಿ ಇಲ್ಲ ಎಂಬುದು ಗಮನಾರ್ಹ.
ಹಾಗಿದ್ದರೂ ದೀರ್ಘಕಾಲದಿಂದ ಗಲ್ಫ್ ದೇಶಗಳಲ್ಲಿ ಬದುಕುತ್ತಿರುವ ಸಿಂಧಿ ಹಿಂದುಗಳಿಗೆ ದೇವಾಲಯ ನಿರ್ಮಿಸುವ ವಿಶೇಷ ಪರವಾನಿಗೆಯನ್ನು ಸರಕಾರವು ನೀಡಿತ್ತು. ಮಲಯಾಳಂನ ಆರ್.ಎಸ್.ಎಸ್. ವಾರಪತ್ರಿಕೆ ಕೇಸರಿ ಬರೆಯುತ್ತದೆ. ‘ಮಸ್ಕತ್, ಬಹರೈನ್, ದುಬೈ ಮುಂತಾದ ಗಲ್ಫ್ ದೇಶಗಳಲ್ಲಿ ಭಾರತೀಯರು, ಹಿಂದೂಗಳಾದ ಸಿಂಧಿಗಳು ವಾಸಿಸುತ್ತಿದ್ದಾರೆ. ಆ ದೇಶಗಳ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಂಡಿರುವ ಅಲ್ಲಿನ ಆಡಳಿತಗಾರರು ಅವರಿಗೆ ವಿಶೇಷ ಪರಿಗಣನೆಯನ್ನು ನೀಡುತ್ತಿದ್ದಾರೆ.’ (6-4-1986)
‘ದುಬೈಯ ಶೇಖ್ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ವಿಶೇಷವಾಗಿ ಪ್ರಯತ್ನಿಸುತ್ತಿದ್ದಾರೆ. ಸಿಂಧಿಗಳ ಬೇಡಿಕೆಯಂತೆ ಒಂದು ಹಿಂದೂ ಕ್ಷೇತ್ರ, ಇಷ್ಟದೇವತೆಗಳನ್ನಿರಿಸಿ ಪೂಜಿಸುವ ಮತ್ತು ಉತ್ಸವಗಳನ್ನು ನಡೆಸುವ ಅನುಮತಿಯನ್ನು ನೀಡಲಾಗಿದೆ. ಹಿಂದೂಗಳಿಗೆ ಅಂತ್ಯ ಸಂಸ್ಕಾರಕ್ಕಾಗಿ ಒಂದು ಪ್ರತ್ಯೇಕ ಶ್ಮಶಾನಕ್ಕಾಗಿ ಸ್ಥಳವನ್ನು ನೀಡಲಾಗಿದೆ.’ (ಕೇಸರಿ 5-1-1986)