ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ ತಡೆಯೊಡ್ಡುವುದಿಲ್ಲ, ಮಾತ್ರವಲ್ಲ ಅಗತ್ಯವಿರುವ ಸಹಕಾರವನ್ನು ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಕಟವಾದ ಪತ್ರಿಕಾ ವರದಿಯನ್ನು ನೋಡಬಹುದು: ‘ಬಾಂಗ್ಲಾದೇಶದ ಹಿಂದೂ ಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನಕ್ಕಾಗಿ ಸರಕಾರವು ಸುಮಾರು ಆರು ಲಕ್ಷ ರೂಪಾಯಿಯನ್ನು ಬಿಡುಗಡೆಗೊಳಿಸಿತು. ಈ ತೀರ್ಮಾನ ಕೈಗೊಂಡ ಮಂತ್ರಿ ನೂರುಲ್ ಇಸ್ಲಾಮ್, ಎಲ್ಲ ಧರ್ಮದ ಏಳಿಗೆಗಾಗಿ ನಾವು ಸಿದ್ಧರಿದ್ದೇವೆ ಎಂದರು.’ ( ಮಾತೃ ಭೂಮಿ 4-10-1985)
ಇನ್ನೊಂದು ಮುಸ್ಲಿಮ್ ರಾಷ್ಟ್ರವಾದ ಇಂಡೋನೇಶ್ಯದ ಕುರಿತು ಆರ್.ಎಸ್.ಎಸ್ ವಾರಪತ್ರಿಕೆ ‘ಕೇಸರಿ’ ಬರೆಯುತ್ತದೆ: ‘ಜಾತ್ಯತೀತ ಸಂವಿಧಾನವಿರುವ ಇಂಡೋನೇಶ್ಯದಲ್ಲಿ ಎಲ್ಲಾ ಧರ್ಮಿಯರಿಗೂ ಸಂಪೂರ್ಣ ಆರಾಧನಾ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇಸ್ಲಾಮ್, ಕ್ರೈಸ್ತ, ಬೌದ್ಧ, ಹಿಂದೂ ಧರ್ಮ ಮೊದಲಾದ ನಾಲ್ಕು ಧರ್ಮಗಳಿಗೆ ಸಮಾನವಾದ ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ ಸರಕಾರದ ನಿಯಂತ್ರಣದಲ್ಲಿ ಒಂದು ಪ್ರತ್ಯೇಕ ಇಲಾಖೆ ಇದೆ. ವಿವಿಧ ಧರ್ಮಾನುಯಾಯಿಗಳು ಇಲ್ಲಿ ಪರಸ್ಪರ ಪ್ರೀತಿ, ಸೌಹಾರ್ದದಿಂದ ಬಾಳುತ್ತಿದ್ದಾರೆ.’ (7-6-1987)
ಪಾಕಿಸ್ತಾನದಲ್ಲಿ ಜನ್ಮಾಷ್ಟಮಿ, ದೀಪಾವಳಿಯಂತಹ ಹಬ್ಬದ ದಿನಗಳಲ್ಲಿ ಹಿಂದೂ ಬಾಂಧವರಿಗೆ ಅಕ್ಕಿ, ಸಕ್ಕರೆಯನ್ನು ವಿಶೇಷವಾಗಿ ನೀಡಲಾಗುತ್ತದೆ. ಅಲ್ಲದೆ ಲಾಹೋರ್ ಜಿಲ್ಲೆಯ ಅಧಿಕೃತ ಶಾಲಾ ಕಾಲೇಜುಗಳ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿದೆ. ಲಾಹೋರ್ನ ಕೈಸ್ತ ಧರ್ಮೀಯರಿಗೆ ಸ್ಮಶಾನ ನಿರ್ಮಿಸಲು ಆರು ಲಕ್ಷ ರೂಪಾಯಿ ಸಹಾಯ ಧನ ನೀಡಲಾಗಿತ್ತು.
1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕೆಲವು ತಿಳಿಗೇಡಿಗಳು ದೇವಾಲಯಗಳನ್ನು ಆಕ್ರಮಿಸಿ ಹಾನಿಯುಂಟು ಮಾಡಿದರು. ಆಗ ಹಿಂದೂ ಆರಾಧನಾಲಯಗಳನ್ನು ರಕ್ಷಿಸಲಿಕ್ಕಾಗಿ ಅಲ್ಲಿನ ಇಸ್ಲಾಮೀ ಕಾರ್ಯಕರ್ತರು ಅವರನ್ನು ತಡೆದರು. ಅಂದು ದೇವಾಲಯಗಳ ಮೇಲಾದ ಆಕ್ರಮಣದ ಕುರಿತು ಸುಗತ ಕುಮಾರಿ ಇಂಡಿಯಾ ಟುಡೆಯಲ್ಲಿ ಬರೆದರು: ‘ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ ಹಿಂದುಗಳಿಗೆ ಏನು ಲಭಿಸಿತು. ನೆರೆಯ ದೇಶಗಳಲ್ಲಿ ಹಲವಾರು ದೇವಾಲಯಗಳು ಹಾನಿಗೊಂಡವು. ಧ್ವಂಸಗೊಂಡ ಮಸೀದಿಯನ್ನು ಪುನರ್ನಿಮಿಸಿ ಕೊಡದಿರಲು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ. ಆದರೆ ಆಕ್ರಮಿಸಲ್ಪಟ್ಟ ದೇವಾಲಯಗಳ ಜೀರ್ಣೋದ್ಧಾರ ಸಾಧ್ಯವಿದೆಯೇ?’
ಆದರೆ, ನಡೆದದ್ದೇ ಬೇರೆ. ಒಂಬತ್ತು ತಿಂಗಳ ಒಳಗೆ ಆಕ್ರಮಿಸಲ್ಪಟ್ಟ ಎಲ್ಲ ದೇವಾಲಯಗಳನ್ನು ಪಾಕಿಸ್ತಾನ ಹಾಗೂ ಬಾಂಗ್ಲಾ ಸರಕಾರ ಪುನಃ ನಿರ್ಮಿಸಿತು. ಇದನ್ನು ಭಾರತೀಯ ಪತ್ರಿಕೆಗಳೇ ಪ್ರಕಟಿಸಿದುವು. ಆ ವಾರ್ತೆಯ ಕಟ್ಟಿಂಗ್ಗಳು ಇಂಡಿಯಾ ಟುಡೆಯ ಲೇಖನದ ಕಾಪಿಯನ್ನು ಕಳುಹಿಸಿ ಕೊಟ್ಟು ಪ್ರತಿಕ್ರಿಯೆ ಬಯಸಿದರೂ ಸುಗತ ಕುಮಾರಿ ಉತ್ತರಿಸುವ ಸೌಜನ್ಯ ತೋರಿಸಲಿಲ್ಲ. ಕಾರಣವೇನೆಂದರೆ ವಾಸ್ತವ ಅವರ ಊಹೆಗಿಂತ ಮತ್ತು ದೇಶದಲ್ಲಿ ನಡೆಸಲಾಗಿರುವ ಪ್ರಚಾರಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು.
ಅನ್ಯಧರ್ಮಿಯರ ಆರಾಧ್ಯ ವಸ್ತುಗಳನ್ನು ಅವಹೇಳನಗೊಳಿಸಲು, ಅವರ ಆರಾಧನಾ ಸ್ಥಳಗಳನ್ನು ಹಾಳುಗೆಡವಲು ಇಸ್ಲಾಮ್ ಯಾರಿಗೂ ಅನುಮತಿ ನೀಡಿಲ್ಲ. ಆದ್ದರಿಂದ ಮುಸ್ಲಿಮ್ ರಾಷ್ಟ್ರಗಳಲ್ಲಿ ಆರಾಧನಾಲಯಗಳು ಆಕ್ರಮಿಸಲ್ಪಡುವುದೋ, ಧ್ವಂಸಕ್ಕೀಡಾಗುವುದೋ ಸಾಧ್ಯವಿಲ್ಲ, ಅಥವಾ ಯಾವುದಾದರೂ ಅವಿವೇಕಿಗಳು ಅಂತಹ ಕೃತ್ಯ ನಡೆಸಿದರೆ ಅದನ್ನು ಪುನರ್ನಿಮಿಸಲು ಇಸ್ಲಾಮೀ ಸಮಾಜ ಹಾಗೂ ಸರಕಾರ ಬದ್ಧವಾಗಿದೆ.