ಹೊಸದಿಲ್ಲಿ, ನ.28: ಬಾಬರಿ ಮಸೀದಿ ಪ್ರಕರಣದ ಸುಪ್ರೀಂಕೋರ್ಟು ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಡಿಸೆಂಬರ್ 9ಕ್ಕೆ ಮೊದಲು ಸಲ್ಲಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.
ಮರುಪರಿಶೀಲನಾ ಅರ್ಜಿಯಿಂದ ಹಿಂದೆ ಸರಿದ ಸುನ್ನಿ ವಕ್ಫ್ ಬೋರ್ಡಿನ ತೀರ್ಮಾನ ಬಾಧಕವಲ್ಲ. ಸಮುದಾಯದ ಸಂಘಟನೆಗಳ ಬೆಂಬಲ ತಮಗಿದೆ ಎಂದು ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.
ಸುಪ್ರೀಂ ಕೋರ್ಟಿನ ತೀರ್ಪು ವಿರುದ್ಧ ಮರುಪರಿಶೀಲನ ಅರ್ಜಿ ಸಲ್ಲಿಸಲು ಕಳೆದ ವಾರ ಮುಸ್ಲಿಂ ಪರ್ಸನಲ್ ಲಾ ಬೋರ್ಡು ನಿರ್ಧರಿಸಿತ್ತು. ಮಸೀದಿ ಕಟ್ಟಲು ಬೇರೆ ಕಡೆ ಐದು ಎಕರೆ ಜಮೀನು ನೀಡುವ ಸುಪ್ರೀಂ ಕೋರ್ಟಿನ ಪ್ರಸ್ತಾವವನ್ನು ನಿರಾಕರಿಸಲಾಗಿತ್ತು.
ಆದರೆ, ಮರುಪರಿಶೀಲನಾ ಅರ್ಜಿ ಸಲ್ಲಿಸುವುದು ಬೇಡ ಎಂದು ಉತ್ತರ ಪ್ರದೇಶ ಬಿಜೆಪಿ ಸರಕಾರದ ನಿಯಂತ್ರಣದಲ್ಲಿರುವ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡು ಸಭೆ ಕಳೆದ ದಿವಸ ನಿರ್ಧರಿಸಿತ್ತು. ಬಾಬರಿ ಜಮೀನಿಗೆ ಬದಲಾಗಿ ಕೋರ್ಟು ಕೊಟ್ಟಿರುವ ಐದು ಎಕರೆ ಜಮೀನು ಸ್ವೀಕರಿಸಬೇಕೆ ಎಂಬ ವಿಷಯದಲ್ಲಿ ತೀರ್ಮಾನವಾಗಿರಲಿಲ್ಲ.
ಬಾಬರಿ ಮಸೀದಿ ಇದ್ದ 2.77 ಎಕರೆ ಜಮೀನು ರಾಮ ಮಂದಿರಕ್ಕೆ ನೀಡಿ ಸುಪ್ರೀಂಕೋರ್ಟು ತೀರ್ಪು ನೀಡಿತ್ತು. ಮಸೀದಿ ನಿರ್ಮಿಸಲು ಐದು ಎಕರೆ ಜಮೀನು ಸುನ್ನಿ ವಕ್ಫ್ ಬೋರ್ಡಿಗೆ ನೀಡಬೇಕೆಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.