ಮಂಗಳೂರು: ಜೂನಿಯರ್ ಫ್ರೆಂಡ್ಸ್ ಸರ್ಕಲ್ ಕುದ್ರೋಳಿ, ಕುದ್ರೋಳಿ ಯಂಗ್ ಬಾಯ್ಸ್ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕುದ್ರೋಳಿಯ ಉರ್ದು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕುದ್ರೋಳಿ ನಡುಪಳ್ಳಿಯ ಖತೀಬರಾದ ರಿಯಾಝ್ ಫೈಝಿ ಕಕ್ಕಿಂಜೆಯವರು ಪಾರಿವಾಳವನ್ನು ಬಿಡುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತಾಡಿದ ಅವರು ರಕ್ತದಾನವು ಅತೀ ಶ್ರೇಷ್ಟ ದಾನವಾಗಿದೆ. ಒಬ್ಬನ ಜೀವ ರಕ್ಷಿಸುವುದು ಸಕಲ ಮಾನವಕುಲದ ಜೀವ ರಕ್ಷಿಸಿದಂತೆ ಎಂಬುದು ಇಸ್ಲಾಮಿನ ಶಿಕ್ಷಣವಾಗಿದೆ, ಆದ್ದರಿಂದಲೇ ಇಸ್ಲಾಮ್ ರಕ್ತ ದಾನವನ್ನು ಪ್ರೋತ್ಸಾಹಿಸಿದೆ ಎಂದರು.
ಕೆ.ಎಮ್.ಸಿ. ಆಸ್ಪತ್ರೆಯ ಡಾಕ್ಟರ್ ವತ್ಸಲ ಮಾತಾಡಿ ರಕ್ತದಾನದಿಂದ ಹಲವು ಜೀವಗಳನ್ನು ರಕ್ಷಿಸಬಹುದು. ರಕ್ತದಾನ ಮಾಡುವುದರಿಂದ ನಮ್ಮ ಸ್ವ ಶರೀರಕ್ಕೆ ಆಗುವ ಪ್ರಯೋಜನಗಳು, ಯಾರೆಲ್ಲಾ ರಕ್ತದಾನ ಮಾಡಬಹುದು? ಯಾರು ಮಾಡಬಾರದು? ರಕ್ತ ದಾನಕ್ಕಿರುವ ನಿಯಮಗಳನ್ನು ಸಭೆಯಲ್ಲಿ ವಿವರಿಸಿದರು.
ಅದ್ಯಕ್ಷತೆ ವಹಿಸಿ ಮಾತಾಡಿದ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಸದಸ್ಯರಾದ ಮಕ್ಬೂಲ್ ಅಹ್ಮದ್, ರಕ್ತವು ದೇವನ ಕೊಡುಗೆಯಾಗಿದೆ. ಅದನ್ನು ಅಗತ್ಯವಿರುವವರಿಗೆ ದಾನ ಮಾಡಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕುದ್ರೋಳಿ ನಡುಪಳ್ಳಿ ಅಧ್ಯಕ್ಷರಾದ ಮುಹಮ್ಮದ್ ಫಝಲ್, ಜಾಮಿಯ ಮಸೀದಿ ಕುದ್ರೋಳಿಯ ಪ್ರಧಾನ ಕಾರ್ಯದರ್ಶಿ ಎಸ್.ಎಮ್.ಖಲೀಲ್, ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಇದರ ನಿರ್ದೆಶಕರಾದ ಕೆ.ಎಮ್.ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರದ ಸಂಚಾಲಕ ಆಸಿಫ್ ಹುಸೈನ್, ಸಹ ಸಂಚಾಲಕರಾದ ನೌಶೀಲ್ ಹಮೀದ್ ಮತ್ತು ಇಕ್ವಾನ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ನಿಹಾಲ್ ಕಿರಾಅತ್ ಪಠಿಸಿದರು. ಆಸಿಫ್ ಹುಸೈನ್ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಕಾಸಿಮ್ ನಿರೂಪಿಸಿ ಧನ್ಯವಾದವಿತ್ತರು.