ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರು ಭಾಜನರಾಗಿದ್ದಾರೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ. 10000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ.
ನಾಡಿನ ಖ್ಯಾತ ವಾಗ್ಮಿಯಾಗಿರುವ ಮುಹಮ್ಮದ್ ಕುಂಞಯವರು ನಾಡಿನ ವಿವಿಧ ಕಡೆಗಳಲ್ಲಿ ಕನ್ನಡ ಭಾಷೆಯಲ್ಲಿ ಸರಳವಾಗಿ ನೂರಾರು ಕುರ್ಆನ್ ಪ್ರವಚನಗಳನ್ನು ನೀಡಿ ಜನರ ಮನಸ್ಸನ್ನು ಜೋಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಜ್ಯದಾದ್ಯಂತ ಸಂಚಾರ ನಡೆಸಿ ವಿವಿಧ ಧರ್ಮೀಯರ ಮಧ್ಯೆ ಸೌಹಾರ್ದತೆಯನ್ನು ಸ್ಥಾಪಿಸಲು ತನ್ನದೇ ಕೊಡುಗೆಗಳನ್ನು ನೀಡಿದ್ದಾರೆ. ನಾಡಿನ ಖ್ಯಾತ ಪ್ರಕಾಶನ ಸಂಸ್ಥೆ ‘ಶಾಂತಿ ಪ್ರಕಾಶನ’ದ ವ್ಯವಸ್ಥಾಪಕರಾದ ಇವರು ವಿವಿಧ ಜಾತಿ-ಸಮುದಾಯಗಳ ಮಧ್ಯೆ ಸ್ನೇಹ ಸೇತುವಾಗಿರುವ ‘ಸದ್ಭಾವನಾ ವೇದಿಕೆ’ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ನಾಗನೂರು ಸ್ವಾಮಿಗಳು’ ಎಂದೇ ಕರ್ನಾಟಕದ ಗಡಿಭಾಗದಲ್ಲಿ ಪ್ರಖ್ಯಾತರಾದ ಡಾ. ಶಿವಬಸವ ಮಹಾಸ್ವಾಮಿಗಳವರ 130ನೆಯ ಜಯಂತಿಯ ಸಂದರ್ಭದಲ್ಲಿ ದಿನಾಂಕ 7-12-2019 ರಂದು ಶನಿವಾರ ಸಾಯಂಕಾಲ 5.30ಕ್ಕೆ ‘ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ನಾಗನೂರು ಶ್ರೀ ರುದ್ರಾಕ್ಷಿ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಮ ಸ್ವಾಮಿಗಳು ತಿಳಿಸಿದ್ದಾರೆ.