ಮಂಗಳೂರು: ಪ್ರವಾದಿ ಮುಹಮ್ಮದ್(ಸ) ಮಾರ್ಗದರ್ಶನದಿಂದ ದೂರ ಸರಿದು ಬದುಕುತ್ತಿರುವುದೇ ಇಂದು ಮುಸ್ಲಿಮ್ ಸಮುದಾಯವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎಂದು ನೂರುನ್ನೀಸಾ (ಶಿಕ್ಷಕಿ ಜಾಮಿಯಾ ಮದ್ರಸ ಕುದ್ರೋಳಿ) ಹೇಳಿದರು.
ಇವರು ಜಮಾಅತೆ ಇಸ್ಲಾಮೀ ಹಿಂದ್ನ ಅಂಗ ಸಂಸ್ಥೆಯಾದ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಮಹಿಳಾ ವಿಭಾಗವು ಮಂಗಳೂರಿನ ಬೋಳಾರ್ ಇಸ್ಲಾಮಿಕ್ ಸೆಂಟರ್ ನಲ್ಲಿ ಹಮ್ಮಿಕೊಂಡ ತಿಬ್ಬುನ್ನಬವಿ (ಪ್ರವಾದಿ ಮುಹಮ್ಮದ್(ಸ) ಆರೋಗ್ಯ ಮಾಹಿತಿ) ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
1,400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ ಹಾಗೂ ಸ್ವತಃ ತಮ್ಮ ಜೀವನದಲ್ಲಿ ಅಳವಡಿಸಿದ ಕೆಲವು ಮಹತ್ವದ ಆರೋಗ್ಯ ಸಲಹೆಗಳು ಇಂದು ಹೇಗೆ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟಿವೆ ಎಂದು ಅವರು ವಿವರಿಸಿದರು. ಪ್ರವಾದಿ(ಸ) ಅವರ ಅನೇಕ ಆರೋಗ್ಯ ಸಲಹೆಗಳನ್ನು ಸಭಿಕರಲ್ಲಿ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಮರ್ಯಮ್ ಶಹೀರ (ಪ್ರಾಂಶುಪಾಲರು ಇಸ್ಲಾಮಿಕ್ ಸೆಂಟರ್ ಬೋಳಾರ್) ಅವರು ಆರೋಗ್ಯ ಸಂರಕ್ಷಣೆಯ ಬಗ್ಗೆ ಕುರ್ಆನಿನಲ್ಲಿರುವ ಕೆಲವು ಹಿತ ನುಡಿಗಳನ್ನು ವಿವರಿಸಿದರು.
ಹೆಚ್.ಆರ್.ಎಸ್. ಸಂಚಾಲಕಿ ರಹ್ಮತ್ ಮನ್ಸೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಮಹಿಳಾ ವಿಭಾಗದ ಸಂಚಾಲಕಿ ಸಮೀನ ಅಫ್ಶಾನ್ ಸಮಾರೋಪ ಭಾಷಣ ಮಾಡಿದರು. ಸುಮಯ್ಯಾ ಹಮೀದುಲ್ಲಾಹ್ ಕಾರ್ಯಕ್ರಮ ನಿರೂಪಿಸಿದರು.