ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಿಯ ಬಳಿ ಹೋಗುವುದು ಮತ್ತು ರೋಗಿ ಇತರರ ಬಳಿ ಹೋಗುವುದನ್ನು ಪ್ರವಾದಿ ಮುಹಮ್ಮದ್ (ಸ) ತಡೆದಿದ್ದರು. ಅಂದರೆ ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದು ಕೊಳ್ಳಬೇಕು. ಎಲ್ಲಿಯವರೆಗೆಂದರೆ ಹುಲಿಯಿಂದ ದೂರ ಹೋಗುವಂತೆ ಭಯ ಪಟ್ಟು ದೂರ ಹೋಗಲು ಪ್ರವಾದಿ (ಸ) ಆದೇಶಿಸಿದ್ದು ನಮಗೆ ಹದೀಸಿನಲ್ಲಿ ಕಾಣ ಸಿಗುತ್ತದೆ. ಎಲ್ಲಿಯವರೆಗೆಂದರೆ ರೋಗ ಪೀಡಿತ ಪ್ರಾಣಿಯನ್ನು ಆರೋಗ್ಯವಂತ ಪ್ರಾಣಿಯ ಹತ್ತಿರ ಕೊಂಡು ಹೋಗಬಾರದು. ಯಾಕೆಂದರೆ ಅದರಿಂದ ವೈರಸ್ ಹರಡುವುದು ಮತ್ತು ಅದರ ಹಾಲಿನಿಂದ ಮನುಷ್ಯರಿಗೂ ಹರಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿತ್ತು.
ಸಕೀಫ್ ನಿಂದ ಒಂದು ತಂಡ ಪ್ರವಾದಿ (ಸ) ರವರ ಕೈಯಲ್ಲಿ ಬೈಅತ್ ಮಾಡಲು ಬಂದಿತ್ತು. ಅದರಲ್ಲಿ ಒಬ್ಬರಿಗೆ ಸಾಂಕ್ರಾಮಿಕ ರೋಗ ಇದೆ ಎಂದು ತಿಳಿದ ಪ್ರವಾದಿ (ಸ) ಅವರಿಗೆ ಹತ್ತಿರ ಬರಬಾರದು ಎಂದು ಹೇಳಿ ದೂರದಿಂದಲೇ ಬೈಅತ್ ಮಾಡಿದೆ ಎಂದು ಹೇಳಿ ಅವರನ್ನು ಅಲ್ಲಿಂದಲೇ ಹಿಂದಿರುಗಲು ಹೇಳಿದರು.
ಯಾವುದೇ ರೋಗಕ್ಕೆ ಮುಂಜಾಗ್ರತೆ ವಹಿಸುವುದು ಅಲ್ಲಾಹ್ ಮತ್ತು ಪ್ರವಾದಿ (ಸ) ಕಲಿಸಿ ಕೊಟ್ಟಿದ್ದಾರೆ. ಯಾವುದೇ ಸಾಂಕ್ರಾಮಿಕ ರೋಗ ಇರುವ ಪ್ರದೇಶಕ್ಕೆ ಹೋಗುವುದು ಮತ್ತು ಅಲ್ಲಿಂದ ಇತರೆಡೆಗೆ ಹೋಗದಂತೆಯೂ ತಡೆಯುತ್ತಿದ್ದರು. ಆದ್ದರಿಂದ ಆ ಕಾಲದಲ್ಲಿ ಇಂದಿನಂತೆ ವೈದ್ಯಕೀಯ ಪರೀಕ್ಷೆ ಐಸೋಲೇಷನ್ ಮಾಡುವ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಪ್ರಾಕೃತಿಕವಾಗಿ ಊರನ್ನೇ ಐಸೋಲೇಷನ್ ಸೆಂಟರ್ ಮಾಡಲಾಗುತ್ತಿತ್ತು.
ಇಂತಹ ಚರ್ಯೆ ಸಹಾಬಿಗಳ ಜೀವನದ್ಲಲೂ ನಮಗೆ ಕಾಣಸಿಗುತ್ತದೆ. ಉಮರ್ (ರ) ರವರ ಆಡಳಿತದ ಕಾಲದಲ್ಲಿ ಅವರು ಸೇನೆಯೊಂದಿಗೆ ಶಾಮ್ (ಸಿರಿಯ)ಗೆ ಹೋದರು. ಅಲ್ಲಿ ಅಬೂಉಬೈದಾ ಜರ್ರಹ್ (ರ) ನೇತೃತ್ವದಲ್ಲಿ ಮೊದಲೇ ಸೇನೆ ಇತ್ತು. ಆ ಸೇನೆಯ ಸಹಾಯಕ್ಕಾಗಿ ಉಮರ್ (ರ) ಹೋಗಿದ್ದರು. ಉಮರ್ (ರ) ಸೇನೆ ಸಿರಿಯಾದ ಗಡಿ ಪ್ರದೇಶಕ್ಕೆ ತಲಪಿದಾಗ ಅಲ್ಲಿದ್ದ ಸಹಾಬಿಗಳು ತಮ್ಮ ನಾಯಕ ಉಮರ್ (ರ) ರನ್ನು ಸ್ವಾಗತಿಸಲು ಬಂದರು.
ಆಗ ಅವರು ಹೇಳಿದರು, ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡಿದೆ. ವೈರಸ್ ಹರಡಿದೆ. ಆಗ ಉಮರ್ (ರ) ವಿವಿಧ ಸ್ಥರದ ಸಹಾಬಿಗಳನ್ನು ಕರೆದು ಮೀಟಿಂಗ್ ಮಾಡಿದರು. ಮೊದಲು ಹಿಜ್ರತ್ ಮಾಡಿದ ಸೀನಿಯರ್ ಸಹಾಬಿಗಳನ್ನು ಕರೆದು ಚರ್ಚೆ ಅಭಿಪ್ರಾಯ ಪಡೆದರು. ಅಲ್ಲಿ ಎರಡು ಅಭಿಪ್ರಾಯ ಬಂತು. 1. ಅಲ್ಲಿಂದ ಹಿಂದೆ ಹೋಗಬೇಕು. ಯಾಕೆಂದರೆ ಅಲ್ಲಿಗೆ ಸಹಾಬಿಗಳನ್ನು ಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು. ಎರಡನೇ ಅಭಿಪ್ರಾಯ, ಇಲ್ಲ ನಾವು ಒಂದು ಉದ್ದೇಶಕ್ಕಾಗಿ ಬಂದಿದ್ದೇವೆ, ಇದಕ್ಕೆಲ್ಲ ಹಿಂದಿರುಗಿ ಹೋಗಬಾರದು ಎಂದು ಕೆಲವರು ಆವೇಶಭರಿತ ಅಭಿಪ್ರಾಯ ಕೊಟ್ಟರು.
ಬಳಿಕ ಉಮರ್ (ರ) ಮದೀನಾ ವಾಸಿಗಳನ್ನು ಕರೆದು ಅಭಿಪ್ರಾಯ ಕೇಳಿದರು. ಅವರೂ ಹೀಗೆಯೇ ಅನ್ಸಾರ್ ಗಳಿಂದಲೂ ಎರಡು ಅಭಿಪ್ರಾಯ ಮುಂದೆ ಬಂದವು. ಬಳಿಕ ಸೀನಿಯರ್ ಖುರೈಶ್ ಗಳನ್ನೂ ಕರೆದು ಅಭಿಪ್ರಾಯ ಪಡೆದರು. ಅವರು ಹೇಳಿದರು, ಯಾವ ಕಾರಣಕ್ಕೂ ಅಲ್ಲಿಗೆ ಹೋಗಬಾರದು, ಆ ಸಾಂಕ್ರಾಮಿಕ ಪ್ರದೇಶಕ್ಕೆ ಹೋಗುವುದು ಸರಿಯಲ್ಲ ಎಂದು ಒಮ್ಮತವಾಗಿ ಹೇಳಿದರು. ಬಳಿಕ ಉಮರ್ ರ ತನ್ನ ತೀರ್ಮಾನ ಹೇಳಿದರು, ನಾವು ಬೆಳಿಗ್ಗೆ ಹಿಂದುರಿಗಿ ಮದೀನಾಕ್ಕೆ ಹೋಗುತ್ತಿದ್ದೇವೆ. ಎಲ್ಲರೂ ತಮ್ಮ ತಮ್ಮ ಸಾಮಾನು ಸರಂಜಾಮುಗಳನ್ನು ತಯಾರುಗೊಳಿಸಿ.
ಅಲ್ಲಿದ್ದ ಪ್ರಮುಖ ಸಹಾಬಿ ಅಬೂ ಉಬೈದ ಜರ್ರಹ್ (ರ) (ಕಮಾಂಡರ್) ಉಮರ್ ರೊಂದಿಗೆ ಹೇಳಿದರು, ಅಮೀರುಲ್ ಮೂಮಿನಿನ್ ಅಲ್ಲಾಹನ ವಿಧಿಯಿಂದ ಪಲಾಯನ ಮಾಡುತ್ತಿದ್ದೀರಾ?
ಮಾತು ಕೇಳಿ ಉಮರ್ ಆಘಾತಗೊಂಡರು, ಈ ಮಾತನ್ನು ಅಬೂ ಉಬೈದ ಜರ್ರಹ್ ರವರ ಹೊರತುಪಡಿಸಿ ಬೇರೆಯವರು ಹೇಳಿದ್ದರೆ, ನನಗೆ ಬೇಸರ ಆಗುತ್ತಿರಲಿಲ್ಲ, ಯಾಕೆಂದರೆ ಅವರು ಉಮರ್ ರನ್ನು ಬಲ್ಲರು, ಧಾರ್ಮಿಕ ಜ್ಞಾನ ಇದೆ, ಎಲ್ಲವೂ ಇದ್ದು ಈ ಮಾತು ಹೇಳಿದ್ದು, ಉಮರ್ ರ ರಿಗೆ ಬೇಸರ ಮೂಡಿಸಿತ್ತು.
“ಹೌದು, ನಾವು ಅಲ್ಲಾಹನ ವಿಧಿಯಿಂದ ಓಡಿ ಹೋಗಿ ಅಲ್ಲಾಹನ ವಿಧಿಯೆಡೆಗೆ ಹೋಗುತ್ತಿದ್ದೇವೆ” ಎಂದು ಉಮರ್ (ರ) ಹೇಳಿದರು. ಆಗ ಅಲ್ಲಿಗೆ ಬಂದ ಸಹಾಬಿ ಅಬ್ದುರ್ರಹ್ಮಾನ್ ಬಿನ್ ಔಫ್ (ರ) ಹೇಳಿದ್ರು, ಪ್ರವಾದಿ ಮುಹಮ್ಮದ್ (ಸ) ರಿಂದ ಕೇಳಿದ್ದೇನೆ, ಯಾವುದೇ ಸಾಂಕ್ರಾಮಿಕ ರೋಗ ಇರುವ ಪ್ರದೇಶಕ್ಕೆ ಹೋಗುವುದು ಮತ್ತು ಅಲ್ಲಿಂದ ಇತರೆಡೆಗೆ ಹೋಗದಂತೆಯೂ ಪ್ರವಾದಿ ಸ್ ಹೇಳಿರುವುದನ್ನು ನೆನಪಿಸಿದರು. ಉಮರ್ (ರ) ಸೇನೆಯೊಂದಿಗೆ ಮರಳಿದರು.
ಅಬೂ ಉಬೈದ ಜರ್ರಹ್ (ರ) ಪ್ರವಾದಿಯ ಇನ್ನೊಂದು ಆದೇಶದಂತೆ ಅಲ್ಲಿ ತವಕ್ಕಲ್ ಮಾಡಿ ಅಲ್ಲೇ ಉಳಿದರು.
ಉಮರ್ (ರ) ಪತ್ರ ಬರೆದು ಮದೀನಾಕ್ಕೆ ಬನ್ನಿ ನಿಮ್ಮ ಅವಶ್ಯಕತೆ ನನಗಿದೆ ಎಂದು ಹೇಳಿದರು. ಆಗ ಅಬೂ ಉಬೈದ ಜರ್ರಹ್ (ರ) ರೋಗ ಪೀಡಿತರಾಗಿ ಸಾವಿನ ಸನಿಹದಲ್ಲಿ ಇದ್ದರು. ಅವರು ಹೇಳಿದರು, ಪ್ರವಾದಿ (ಸ) ಆದೇಶದಂತೆ ಇಲ್ಲೇ ಇರಲು ನನಗೆ ಅವಕಾಶ ಕೊಡಿ ಎಂದು ವಿನಂತಿಸಿದರು. ಇದನ್ನು ಕೇಳಿ ಉಮರ್ (ರ) ಅತ್ತರು.
ಈ ಘಟನೆಗಳನ್ನು ಮುಂದಿಟ್ಟು ಇಸ್ಲಾಂ ಧರ್ಮ ರೋಗ ರುಜಿನ ಮತ್ತು ಪರೀಕ್ಷೆಗಳನ್ನು ಹೇಗೆ ನಿಭಾಯಿಸಲು ಮಾರ್ಗದರ್ಶನ ಮಾಡುತ್ತದೆ ಎಂದು ನಾವು ಸ್ವತಃ ತೀರ್ಮಾನ ಮಾಡಬಹುದು. ಮಸೀದಿಯಲ್ಲಿ ಜನಸಂದಣಿ ಕಡಿಮೆ ಮಾಡಬೇಕೋ, ಮನೆಯಲ್ಲಿ ನಮಾಜ್ ಮಾಡಬೇಕೋ? ಮನೆಯಲ್ಲಿ ಕೆಲಸ ಮಾಡಬೇಕೋ ಎಂಬುದನ್ನು ನಮಗೆ ನಾವು ತೀರ್ಮಾನ ಮಾಡಬಹುದು.
ಹಾಗೆಯೆ ರೋಗಕ್ಕೆ ಪ್ರಕೃತಿಕೆ ಧರ್ಮ, ಗೋತ್ರ, ಪಂಗಡ ಎಂಬ ಬೇಧ ಇಲ್ಲ. ಅದು ಎಲ್ಲರನ್ನು ಸಮಾನವಾಗಿಸುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯ ಮುಂಜಾಗ್ರತೆ ಮತ್ತು ಚಿಕಿತ್ಸೆಗೆ ಒತ್ತು ಕೊಡಬೇಕು ಎಂದು ಪ್ರವಾದಿ (ಸ) ಆದೇಶಿಸಿದ್ದಾರೆ.
ಸಅದ್ ಇಬ್ನ್ ಅಬಿ ವಕ್ಕಾಸ್ ಹೇಳುತ್ತಾರೆ “ಒಮ್ಮೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ಪ್ರವಾದಿ ಸಲ್ಲಲ್ಲಾಹು` ಅಲೈಹಿ ವಾ ಸಲ್ಲಂ ನನ್ನನ್ನು ಭೇಟಿ ಮಾಡಲು ಬಂದರು, ಆದ್ದರಿಂದ ಅವರು ನನ್ನ ಎದೆಯನ್ನು ಸವರಿದರು, ಬಳಿಕ ಹೇಳಿದರು “ನೀವು ಹೃದಯ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ, ಆದ್ದರಿಂದ ತಕೀಫ್ ಅವರ ಸಹೋದರ ಅಲ್-ಹರಿತ್ ಇಬ್ನ್ ಕಲಾದಾಗೆ ಹೋಗಿ ಚಿಕಿತ್ಸೆ ಮಾಡಿಸಿ, ಅವರು ವೈದ್ಯಕೀಯ ಚಿಕಿತ್ಸೆ ನೀಡುವ ವ್ಯಕ್ತಿ.” [ಅಬು ದಾವೂದ್]. ಒಂದು ಅಭಿಪ್ರಾಯದ ಪ್ರಕಾರ ತಕೀಫ್ ಅವರ ಸಹೋದರ ಅಲ್-ಹರಿತ್ ಇಬ್ನ್ ಕಲಾದಾ ಓರ್ವ ಅಮುಸ್ಲಿಂ ಆಗಿದ್ದರು ಎಂದು ಉಲ್ಲೇಖ ಇದೆ.
ಪಕೃತಿ ದುರಂತ,ಸುನಾಮಿ, ಭೂಕಂಪ, ಸಾಂಕ್ರಾಮಿಕ ರೋಗದಲ್ಲಿ ಸಾವಿರಾರು ಜೀವ ಕಳಕೊಳ್ಳುತ್ತಿರುವಾಗ ದೇವರು ಏನು ಮಾಡುತ್ತಿದ್ದಾನೆ? ಧರ್ಮ ಮಸೀದಿ, ಮಂದಿರದ ಅವಶ್ಯಕತೆ ಇದೆಯೇ ಎಂಬ ಅರ್ಥಹೀನ ಚರ್ಚೆ ಮಾಡುವುದರಿಂದ ಯಾವುದೇ ಫಲ ಇಲ್ಲ.
ಭೂಮಿಯೆಂಬ ಕಾರ್ಖಾನೆಯ ಅಸ್ತಿತ್ವ ಹಾಗೆಯೇ ಇದೆ. ಇದು ಜೀವನ ಮತ್ತು ಮರಣದ ಕಾರ್ಖಾನೆಯಾಗಿದೆ. ಭೂಮಿಯಲ್ಲಿ ದಿನನಿತ್ಯ ಬೇರೆ ಬೇರೆ ಕಡೆ ಜನರು ವಿವಿಧ ಕಾರಣಗಳಿಂದ ಮರಣವನ್ನು ಹೊಂದುತ್ತಾರೆ. ಅದನ್ನು ಸಂಖ್ಯೆಯಲ್ಲಿ ಕ್ರೋಢೀಕರಿಸಿದರೆ ಲಕ್ಷಗಟ್ಟಲೆಯಾಗುತ್ತದೆ. ಆಗ ನಮಗೆ ಭೀಕರವೆನಿಸುವುದಿಲ್ಲ. ದೇವನ ಮೇಲೆ ದೂರು ಇರುವುದಿಲ್ಲ. ಕೆಲವೊಮ್ಮೆ ಜನರು ಒಟ್ಟಾಗಿ ಜೀವ ಕಳಕೊಳ್ಳುತ್ತಾರೆ. ಇದು ದೇವನ ಕಾರ್ಖಾನೆಯಲ್ಲಿ ನಡೆಯುವುದು.
ಕುರಾನ್ ಹೇಳುತ್ತದೆ, ನಾವು ಮರಣ ಮತ್ತು ಜೀವನವನ್ನು ಆವಿಷ್ಕರಿಸಿದೆವು, ಯಾರು ಸತ್ಕರ್ಮವೆಸಗುತ್ತಾರೆ ಎಂದು ಪರೀಕ್ಷಿಸಲಿಕ್ಕಾಗಿ-
ಧರ್ಮ ಜಾತಿ ಪಂಗಡ ಸಂಪತ್ತಿನ ಹೆಸರಿನಲ್ಲಿ ಗಲಭೆ ದ್ವೇಷ ದೊಂಬಿ ಮಾಡಿ ಬಡವರನ್ನು ಹಿಂಸಿಸುವ ಅಹಂಕಾರಿ ಮನುಷ್ಯನಿಗೆ ಪಾಠ ಕಲಿಯುವಂತೆ ಇಂತಹ ಪರೀಕ್ಷೆ ಮತ್ತೆ ಮತ್ತೆ ನೆನಪಿಸುತ್ತದೆ. ಈ ವಿಶ್ವಾಸ ಇಲ್ಲದಿದ್ದರೆ ಮನುಷ್ಯ ಇನ್ನಷ್ಟು ಉದ್ಧಟತನ ತೋರುತ್ತಾನೆ..
ಅಬೂ ಕುತುಬ್