ಇಂದೋರ್: ನಗರದಲ್ಲಿ ಬುಧವಾರ ಕೊರೋನ ಶಂಕಿತರ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ಗುಂಪು ನಡೆಸಿದ ದಾಳಿ ದೇಶಾದ್ಯಂತ ಸುದ್ದಿಯಾಗಿದೆ. ಈ ಆರೋಗ್ಯ ಕಾರ್ಯಕರ್ತರ ತಂಡದಲ್ಲಿದ್ದವರೊಬ್ಬರು ಡಾ ಝಕಿಯಾ ಸೈಯದ್. ದಾಳಿಯ ವೇಳೆ ಅವರಿಗೂ ಗಾಯಗಳಾಗಿದ್ದವು.
“ಕಳೆದ ನಾಲ್ಕು ದಿನಗಳಿಂದ ಕೊರೋನ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಆದರೆ ಬುಧವಾರದಂತಹ ಘಟನೆ ನಾವು ಈವರೆಗೆ ನೋಡಿಲ್ಲ, ನಮಗೆ ಗಾಯಗಳಾಗಿವೆ, ಆದರೆ ನಾವು ನಮ್ಮ ಕರ್ತವ್ಯವನ್ನು ಮಾಡಬೇಕಿದೆ. ನಾವು ಭಯ ಪಡುವುದಿಲ್ಲ” ಎಂದು ಡಾ. ಝಕಿಯಾ ಹೇಳಿದ್ದಾರೆ.
“ಕೊರೋನ ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದ ವ್ಯಕ್ತಿಯ ಬಗ್ಗೆ ತಿಳಿದು ಬಂದಿತ್ತು. ಅವರ ( ಹಿರಿಯ ಮಹಿಳೆ) ಜತೆ ನಾವು ಮಾತನಾಡುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೆ ಸ್ಥಳೀಯರು ಸಿಟ್ಟುಗೊಂಡು ದಾಳಿ ನಡೆಸಿದ್ದರು” ಎಂದು ಘಟನೆ ನಡೆದ ಬೆನ್ನಲ್ಲಿ ತಂಡದಲ್ಲಿದ್ದ ವೈದ್ಯರೊಬ್ಬರು ಹೇಳಿದ್ದರು.
ಈ ದಾಳಿಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಅವರ ವಿರುದ್ಧ ಹೇರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಕ್ರಪೆ. ವಾರ್ತ ಭಾರತಿ