ಕಲ್ಲಾಪುವಿನಲ್ಲಿ ಹೀಗೊಂದು ಸೌಹಾರ್ದದ ಬ್ಯಾನರ್
ಮಂಗಳೂರು : ಕೊರೋನ ವೈರಸ್ ಭೀತಿಯ ನಡುವೆ ಕೋಮು ದ್ವೇಷವೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್ ಬುಕ್ ಗಳಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ದ್ವೇಷ ಹರಡಲಾಗುತ್ತಿದೆ. ಈ ನಡುವೆ ಕರಾವಳಿಯ ಕೆಲವೆಡೆ ‘ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ” ಎಂಬ ಬ್ಯಾನರ್ ಕಾಣಿಸಿಕೊಂಡು ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಕಲ್ಲಾಪುವಿನಲ್ಲಿ ಹಾಕಲಾದ ಭಿತ್ತಿಪತ್ರವೊಂದು ಎಲ್ಲರ ಗಮನ ಸೆಳೆಯುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಕಲ್ಲಾಪುವಿನಲ್ಲಿ ಹಾಕಲಾದ ಬ್ಯಾನರ್ ನಲ್ಲಿ “ಕಲ್ಲಾಪುವಿನ ಸರ್ವ ಧರ್ಮೀಯರೇ (ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ..) ಕೊರೋನ ಲಾಕ್ ಡೌನ್ ಸಮಯದಲ್ಲಿ ತಮಗೇನಾದರೂ ನಮ್ಮ ಸಹಾಯ ಅಗತ್ಯವಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಬಹುದು… ಯಾವುದೇ ಹಿಂದೂ ವ್ಯಾಪಾರಸ್ಥರು ಮುಕ್ತವಾಗಿ ನಮ್ಮೂರಿನಲ್ಲಿ ವ್ಯಾಪಾರ ಮಾಡಬಹುದು. ಸಹಾಯ, ಸಹಕಾರಕ್ಕಾಗಿ ಸರ್ವ ಧರ್ಮೀಯರಿಗೂ ನಾವು ಸಿದ್ಧರಿದ್ದೇವೆ. – ಇತೀ ಮುಸ್ಲಿಂ ಬಾಂಧವರು, ಕಲ್ಲಾಪು” ಎಂದು ಬರೆಯಲಾಗಿದೆ.
ಕೋಮು ದ್ವೇಷ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಕೋಮು ಸಾಮರಸ್ಯ ಕಾಪಾಡುವ ಈ ಭಿತ್ತಿಪತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕ್ರಪೆ: ವಾರ್ತಾ ಭಾರತಿ