ನವದೆಹಲಿ, ಎಪ್ರಿಲ್ 18- ಲಾಕ್ ಡೌನ್ ಕಾರಣದಿಂದ ಸಂಕಟಕ್ಕೆ ಒಳಗಾದ ಜನರಿಗಾಗಿ 10 ಕೋಟಿ ರೂಪಾಯಿಯ ಪರಿಹಾರ ಕಾರ್ಯಗಳನ್ನು ನಡೆಸಿರುವುದಾಗಿ ಜಮಾಅತೆ ಇಸ್ಲಾಮಿ ಹಿಂದ್ ತಿಳಿಸಿದೆ.
ಜಾತಿ, ಮತ, ಭೇದವನ್ನು ಪರಿಗಣಿಸದೆ ಸಂತ್ರಸ್ತರಾದ 10 ಲಕ್ಷ ಮಂದಿಗೆ ಆಹಾರ ವಸ್ತುಗಳು, ಸಿದ್ಧ ಆಹಾರಗಳು ಮತ್ತು ಹಲವರಿಗೆ ನಗದು ರೂಪಾಯಿಗಳನ್ನು ಕೂಡ ಹಂಚಲಾಗಿದೆ ಎಂದು ಜಮಾಅತ್ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾನಿಗಳ ನೆರವು ಮತ್ತು ತನ್ನ ಕಾರ್ಯಕರ್ತರ ಸಕ್ರಿಯ ಪಾತ್ರದ ಮೂಲಕ ಸಂತ್ರಸ್ತರ ಬದುಕು ಬೆಳಗಿಸಲು ನಮಗೆ ಸಾಧ್ಯವಾಗಿದೆ ಎಂದು ದುರಂತ ಕಾರ್ಯಗಳ ವಿಭಾಗದ ಮೇಲ್ನೋಟ ವಹಿಸುತ್ತಿರುವ ಮುಹಮ್ಮದ್ ಅಹ್ಮದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಲಸಿಗ ಕಾರ್ಮಿಕರು, ಬಡವರು ನಮ್ಮ ಪರಿಹಾರ ಕಾರ್ಯಗಳ ಪ್ರಯೋಜನ ಪಡೆದರೆಂದು ಅವರು ಹೇಳಿದ್ದಾರೆ.
5,80, 519 ಆಹಾರ ಸಾಮಗ್ರಿಗಳ ಕಿಟ್ ಗಳು, 4,32,228 ಸಿದ್ಧ ಆಹಾರದ ಪೊಟ್ಟಣಗಳು, 3,88,852 ಮಾಸ್ಕ್ ಗಳು ಮತ್ತು 3970 ಸ್ಯಾನಿಟೈಸರ್ ಗಳು ಈ ಪರಿಹಾರ ಕಾರ್ಯಗಳಲ್ಲಿ ಒಳಗೊಂಡಿವೆ ಎಂದವರು ಹೇಳಿದ್ದಾರೆ. ಅಲ್ಲದೆ, 10,06,553 ಜನರಿಗೆ ಆರ್ಥಿಕ ನೆರವನ್ನು ನೀಡಲಾಗಿದೆ. 44,503 ಜನರಿಗೆ ಇನ್ನಿತರ ನೆರವನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ ಅವರು,
ಕೋಮುಗಲಭೆ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತವನ್ನು ನೋಡದೆ ಜನರ ಬೆನ್ನಿಗೆ ನಿಲ್ಲುವುದು ಜಮಾಅತೆ ಇಸ್ಲಾಮಿ ಹಿಂದ್ ನ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ.