Home / ವಾರ್ತೆಗಳು / ಮಸೀದಿ ಉದ್ಘಾಟಿಸಿ ಕೃಷ್ಣರಾಜ ಒಡೆಯರ್‌ ಮಾಡಿದ ಭಾಷಣ ಶತಮಾನದ ನಂತರವೂ ಪ್ರಸಕ್ತ

ಮಸೀದಿ ಉದ್ಘಾಟಿಸಿ ಕೃಷ್ಣರಾಜ ಒಡೆಯರ್‌ ಮಾಡಿದ ಭಾಷಣ ಶತಮಾನದ ನಂತರವೂ ಪ್ರಸಕ್ತ

ಮೈಸೂರು: ಮೈಸೂರು ಸಂಸ್ಥಾನ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಬ್ಬ ಮಾದರಿ ಆಡಳಿತಗಾರ. ಜನರ ಆಧ್ಯಾತ್ಮಿಕ ಹಾಗೂ ಭೌತಿಕ ಕಲ್ಯಾಣವೂ ಅಭಿವೃದ್ಧಿಯೆಂದು ಪರಿಗಣಿಸಿಕೊಂಡಿದ್ದ ಒಡೆಯರು, ತನ್ನ ಪ್ರಜೆಗಳ ಸಂತೋಷ ಮತ್ತು ಯೋಗಕ್ಷೇಮಕ್ಕಿಂತ ಹೆಚ್ಚಿನ ಆಶಿರ್ವಾದವು ಒಬ್ಬ ಆಡಳಿತಗಾರನಿಗೆ ಇಲ್ಲವೆಂದೇ ನಂಬಿದ್ದವರು. ಅವರ ಈ ನಂಬಿಕೆಯು ಅವರು ಆಗಿನ ಬಾಡಿ ಗಾರ್ಡ್‌ ಲೈನ್‌ ಪ್ರದೇಶದಲ್ಲಿ ತನ್ನ ಮುಸ್ಲಿಂ ಪ್ರಜೆಗಳಿಗಾಗಿ ಮಸೀದಿ ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ವ್ಯಕ್ತವಾಗುತ್ತದೆ.

ಉರ್ದು ಭಾಷೆಯಲ್ಲಿಯೂ ಸಾಕಷ್ಟು ಜ್ಞಾನ ಹೊಂದಿದ್ದ ಕೃಷ್ಣರಾಜ ಒಡೆಯರ್‌ ಅವರು ಮಸೀದಿ ಉದ್ಘಾಟನೆ ವೇಳೆ ಉರ್ದುವಿನಲ್ಲೇ ಈ ಭಾಷಣವನ್ನು ಮಾಡಿದ್ದರು. 1922 ರ ಎಪ್ರಿಲ್‌ 14 ರಂದು ಮಾಡಿದ ಈ ಭಾಷಣಕ್ಕೆ ಒಂದು ಶತಮಾನ ಕಳೆದಿದೆ. ಜಾತಿ ಹಾಗೂ ಧರ್ಮದ ಕಾರಣಕ್ಕಾಗಿ ಸಾವಿನಲ್ಲೂ, ಕೊಡುಗೆಯಲ್ಲೂ ಬೇಧ ಮಾಡುವ ಸರ್ಕಾರದ ನಡುವೆ ಕೃಷ್ಣರಾಜ ಒಡೆಯರ್‌ ಅವರ ಈ ಭಾಷಣವು ಬಹಳಷ್ಟು ಪ್ರಸಕ್ತಿ ಹೊಂದಿದೆ.

ಕೃಷ್ಣರಾಜ ಒಡೆಯರ್‌ ಅವರ ಭಾಷಣದ ಪೂರ್ಣ ಪಠ್ಯದ ಕನ್ನಡ ಅನುವಾದ ಇಲ್ಲಿದೆ.

“ಬಾಡಿ ಗಾರ್ಡ್‌ ಲೈನ್‌ನ ಮುಸ್ಲಿಮರ ಬಳಕೆಗಾಗಿ ಮಸೀದಿಯನ್ನು ನಿರ್ಮಿಸಿರುವುದರಲ್ಲಿ ನಮಗೆ ಅತೀವ ತೃಪ್ತಿಯಿದೆ. ಪ್ರಾರ್ಥನೆಯ ಅತ್ಯಮೂಲ್ಯ ಮೌಲ್ಯದ ಮೇಲೆ ವಿಶೇಷ ಒತ್ತು ನೀಡುವುದು ಇಸ್ಲಾಮಿನ ಗಮನಾರ್ಹ ಲಕ್ಷಣಗಳಲ್ಲಿ ಒಂದಾಗಿದೆ. ಧರ್ಮದ ರಚನೆಯಲ್ಲಿ ಪ್ರಾರ್ಥನೆಯು ಮುಖ್ಯ ಸ್ತಂಭವಾಗಿದೆ. ಇದು ಮನುಷ್ಯನ ನೈತಿಕ ಉನ್ನತಿಯ ಪ್ರಬಲ ಸಾಧನವಾಗಿದೆ. ಮುಸಲ್ಮಾನ್ ಸಮುದಾಯವು ಮಸೀದಿಯನ್ನು ಸಂಪೂರ್ಣವಾಗಿ ಬಳಸಿದರೆ ಮತ್ತು ಅವರು ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ (ಮಸೀದಿಯನ್ನು) ನಿರಂತರವಾಗಿ ಆಶ್ರಯಿಸಿದರೆ ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ.

ಈ ಮಸೀದಿಯು ಒಂದು ಬದಿಯಲ್ಲಿದೆ. ಇನ್ನೊಂದು ಬದಿಯಲ್ಲಿ ಹಿಂದೂ ದೇವಾಲಯವಿದೆ. ಎರಡೂ ತನ್ನ ಅನುಯಾಯಿಗಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತದೆ. ಎರಡೂ ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿದೆ. ಇದು ಎಲ್ಲಾ ವೈವಿಧ್ಯಮಯ ಜಾತಿಗಳು ಮತ್ತು ಪಂಥಗಳೊಂದಿಗೆ ಮಾತೃ ಭೂಮಿಯ ಆಹ್ಲಾದಕರ ಗುಣ ಲಕ್ಷಣವಾಗಿ ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ.  ಒಬ್ಬ ಹಿಂದೂ ಭಕ್ತನಿಗೆ ಎರಡೂ ಕೂಡಾ ಒಂದೇ ಗುರಿಯೆಡೆಗೆ ತಲುಪುವ ದಾರಿಯಂತೆ ಎರಡೂ ಪ್ರತಿನಿಧಿಸುತ್ತದೆ.  ಮುಸಲ್ಮಾನ ಸಮುದಾಯಕ್ಕೆ ಮಸೀದಿಯನ್ನು ಒದಗಿಸುವ ಮೂಲಕ ಮತ್ತು ಅದನ್ನು ನೀಡುವ (ಕಾರ್ಯಕ್ರಮದಲ್ಲಿ) ಪಾಲ್ಗೊಳ್ಳುವ ಮೂಲಕ, ನನ್ನಂತಹ ಹಿಂದೂಗೆ ಅವರನ್ನು ನಿಜವಾದ ಮುಸ್ಲಿಮರಾಗಲು ಮತ್ತು ಅವರ ಧರ್ಮದ ಉದಾತ್ತ ಸಂಪ್ರದಾಯಗಳನ್ನು ಅನುಸರಿಸಲು ಪ್ರೋತ್ಸಾಹಿಸಿದ ಸಂತೋಷ, ಪ್ರತಿಫಲವನ್ನು ಅನುಭವಿಸುತ್ತೇನೆ.

ತನ್ನ ಜನರ (ಅವರು ಹಿಂದೂಗಳು, ಮಹಮದೀಯರು ಅಥವಾ ಕ್ರಿಶ್ಚಿಯನ್ನರೇ ಇರಬಹುದು) ಆಧ್ಯಾತ್ಮಿಕ ಮತ್ತು ಭೌತಿಕ ಕಲ್ಯಾಣಕ್ಕಾಗಿ ಆಳವಾದ ಆಸಕ್ತಿಯನ್ನು ಹೊಂದಿರುವ ಆಡಳಿತಗಾರನಿಗೆ ತನ್ನ ಜನರ ಸಂತೋಷ ಮತ್ತು ಯೋಗ ಕ್ಷೇಮಕ್ಕಿಂತ ಹೆಚ್ಚಿನ ಆಶೀರ್ವಾದವನ್ನು ಸರ್ವಶಕ್ತ ದೇವರು ನೀಡಲಾರನು. ಮಸೀದಿಯನ್ನು ತೆರೆಯಲು ನನಗೆ ತುಂಬಾ ಸಂತೋಷವಾಗಿದೆ.

ಕುರಾನಿನ ಈ ಸಾಲನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಪ್ರಾರ್ಥನೆಗಳನ್ನು ಪಠಿಸಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. “ಪ್ರಾರ್ಥನೆಗಳನ್ನು ಮುಂದುವರಿಸಿ, ಖಂಡಿತವಾಗಿಯೂ ಪ್ರಾರ್ಥನೆಗಳು ಒಬ್ಬನನ್ನು ದುಷ್ಟತನದಿಂದ ದೂರವಿಡುತ್ತವೆ ಮತ್ತು ಖಂಡಿತವಾಗಿಯೂ ಅಲ್ಲಾಹನನ್ನು ಮಹಾನ್ ಸರ್ವಶಕ್ತ ಎಂದು ಸ್ಮರಿಸುವುದು ನಮ್ಮನ್ನು ಪಾಪದಿಂದ ಮುಕ್ತಗೊಳಿಸುತ್ತದೆ ಮತ್ತು ನಮ್ಮ ಮೋಕ್ಷವನ್ನು ಖಚಿತ ಪಡಿಸುತ್ತದೆ.” ಹಿಂದೂಗಳಾಗಲಿ, ಮಹಮದೀಯರಾಗಲಿ ಅಥವಾ ಇತರರಾಗಲಿ ನಿಮ್ಮೆಲ್ಲರನ್ನೂ ನನಗೆ ಸಮಾನವಾಗಿ ಪ್ರೀತಿಯವರಾಗಿದ್ದೀರಿ.

ನೀವು ಮೊದಲು ಮೈಸೂರಿಗರು, ಉಳಿದದ್ದೇನಿದ್ದರೂ ನಂತರ ಎಂಬ ಅಂಶವನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳುತ್ತೀರಿ ಹಾಗೂ ರಾಜ್ಯದ ಕರ್ತವ್ಯದ ಭಾಗವಾಗಿ ನೀವು ಯಾವಾಗಲೂ ಎಲ್ಲರ ಪ್ರಯೋಜನಕ್ಕಾಗಿ ಮತ್ತು ಎಲ್ಲಾ ದಿಕ್ಕುಗಳಲ್ಲಿಯೂ ರಾಜ್ಯದ ಸಮೃದ್ಧಿ ಮತ್ತು ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ.”

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …