ನವದೆಹಲಿ ಮೇ 8- 32 ವರ್ಷದ ಇಮ್ರಾನಾ ಸೈಫಿ ಇವತ್ತು ದೆಹಲಿಯಲ್ಲಿ ಸುದ್ದಿಯ ಕೇಂದ್ರವಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಧಾವಿಸಿದ್ದ ಏಳನೇ ತರಗತಿವರೆಗೆ ಮಾತ್ರ ಕಲಿತಿರುವ ಈ ಮಹಿಳೆ ಇದೀಗ ಕೊರೋನಾದ ವಿರುದ್ಧ ಹೋರಾಡುವುದಕ್ಕಾಗಿ ಕೊರೋನಾ ವಾರಿಯರ್ಸ್ ಎಂಬ ಮೂವರು ಮಹಿಳೆಯರ ತಂಡವೊಂದನ್ನು ಕಟ್ಟಿ ಕೆಲಸ ಮಾಡುತ್ತಿದ್ದಾರೆ.
ಜಫ್ರಾಬಾದ್ ,ಮುಸ್ತಫಾ ಬಾದ್, ಚಾಂದ್ ಬಾಗ್, ನೆಹರು ವಿಹಾರ, ಶಿವು ವಿಹಾರ್, ಬಾಬು ನಗರ್ ಮುಂತಾದ ಪ್ರದೇಶಗಳ ಮಸೀದಿ, ಗುರುದ್ವಾರ್, ಚರ್ಚ್, ದೇವಾಲಯ ಎಂಬ ವ್ಯತ್ಯಾಸ ಮಾಡದೆ ಅವರು ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉತ್ತರ ದೆಹಲಿಯ ನೆಹರೂ ವಿಹಾರ್ ನ ನವದುರ್ಗ ದೇವಸ್ಥಾನಕ್ಕೆ ಭೇಟಿ ನೀಡಿದ ಸೈಫಿ ಅಲ್ಲಿ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸುವ ಚಿತ್ರಗಳು ವೈರಲ್ ಆಗಿವೆ.
ಮೂವರು ಮಕ್ಕಳ ತಾಯಿಯಾಗಿರುವ ಇವರನ್ನು ದೆಹಲಿಯ ದೇವಾಲಯಗಳು, ಮಸೀದಿಗಳು ಸ್ವಾಗತಿಸಿ ಔಷಧ ಸಿಂಪಡಣೆಗೆ ಅವಕಾಶ ಕೊಡುತ್ತಿವೆ. ಇವಲ್ಲದೆ, ಮನೆಗಳಿಗೂ ಔಷಧಿ ಸಿಂಪಡಣೆ ಗಾಗಿ ಈ ತಂಡ ಪ್ರತಿದಿನ ತೆರಳುತ್ತಿದೆ.
ಭಾರತದ ಜಾತ್ಯತೀತ ಸಂಸ್ಕೃತಿಯನ್ನು ಎತ್ತಿಹಿಡಿಯಲು ನಾನು ಬಯಸುತ್ತೇನೆ. ನಾವೆಲ್ಲರೂ ಒಂದೇ ಮತ್ತು ಜೊತೆಯಾಗಿರೋಣ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲು ಬಯಸುತ್ತೇನೆ ಎಂದು ಇಮ್ರಾನ ಹೇಳಿದ್ದಾರೆ.
ನೆಹರೂ ವಿಹಾರ್ ನವದುರ್ಗ ಮಂದಿರದ ಅರ್ಚಕರಾಗಿರುವ ಪಂಡಿತ್ ಯೋಗೇಶ ಕೃಷ್ಣ ಅವರು ಇಮ್ರಾನ ಸೈಫಿ ಅವರ ತಂಡವನ್ನು ಅಭಿನಂದಿಸಿದ್ದಾರೆ. ಇಂತಹ ಕ್ರಮಗಳು ಸ್ವಾಗತಾರ್ಹ ಮತ್ತು ಸೌಹಾರ್ದ ಪೂರ್ಣ ಭಾರತವನ್ನು ಕಟ್ಟುವುದಕ್ಕೆ ಬಹಳ ಅಗತ್ಯ. ನಾವು ದ್ವೇಷವನ್ನು ತ್ಯಜಿಸಬೇಕು ಮತ್ತು ಪ್ರೀತಿಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಪರಸ್ಪರರ ಹಿತೈಷಿಗಳಾಗಬೇಕು ಎಂದವರು ಎನ್ಡಿಟಿವಿ ಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇಮ್ರಾನ ಅವರ ಪತಿ ಪ್ಲಂಬರ್ ವೃತ್ತಿ ಮಾಡುತ್ತಿದ್ದು ಲಾಕ್ ಡೌನ್ ನಿಂದಾಗಿ ಸದ್ಯ ಕೆಲಸ ಇಲ್ಲದೆ ಮನೆಯಲ್ಲೇ ಉಳಿದಿದ್ದರೂ ಇಮ್ರಾನ ಸೈಫಿ ತನ್ನ ಸೇವೆಯನ್ನು ಮುಂದುವರಿಸಿದ್ದಾರೆ.